ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ: ಎಚ್ಡಿಕೆ ಟ್ವೀಟ್ಗೆ ಸುಮಲತಾ ಉತ್ತರ | ಜನತಾ ನ್ಯೂಸ್
ಬೆಂಗಳೂರು : ಸದ್ಯದಲ್ಲಿಯೇ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮತ್ತು ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲಿಸುತ್ತೇನೆ ಎಂದು ಮಂಡ್ಯ ಸಂಸದ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಕೆಆರ್ಎಸ್ ಅಣೆಕಟ್ಟೆ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರೊಂದಿಗೆ ನಡೆಸುತ್ತಿದ್ದ ರಾಜಕೀಯ ಕದನಕ್ಕೆ ವಿರಾಮ ಹಾಕಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ. ರವೀಂದ್ರ ಶ್ರೀಕಂಠಯ್ಯ ಹೇಳಿದಂತೆ ನಡೆದುಕೊಳ್ಳಲಾಗಲ್ಲ. ಒಬ್ಬ ಸಂಸದೆಯಾಗಿ ನನ್ನ ಜವಾಬ್ದಾರಿ ನನಗೆ ಗೊತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.
ಕೆಆರ್ಎಸ್ಗೆ ಭೇಟಿ ನೀಡಲು ಈವರೆಗೆ ಅನುಮತಿ ಇರಲಿಲ್ಲ. ಕಾವೇರಿ ನಿಗಮದ ಅನುಮತಿ ಪಡೆದು ಹೋಗುತ್ತೇನೆ. ಕೆಆರ್ಎಸ್ ಜಲಾಶಯ ಪರಿಶೀಲನೆ ಮಾಡಲು ಹೋಗುತ್ತೇನೆ. ಹಾಗೆಯೇ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ಪರಿಶೀಲಿಸುವೆ.
ಸತ್ಯದ ಪರ ಹೋರಾಟ ಮಾಡುವಾಗ ಈ ರೀತಿ ಅಡೆತಡೆಗಳು, ಶತ್ರುಗಳು ಹುಟ್ಟಿಕೊಳ್ಳುವುದು ಸಹಜ, ಇದರಿಂದಲೇ ನಾನು ಸತ್ಯದ ಪರ ಹೋರಾಡುತ್ತಿದ್ದೇನೆ ಎಂದು ಗೊತ್ತಾಗುತ್ತದೆ ಎಂದು ತಮ್ಮ ನಡೆಯನ್ನು ಸುಮಲತಾ ಅಂಬರೀಷ್ ಸಮರ್ಥಿಸಿಕೊಂಡಿದ್ದಾರೆ.
ಅಧಿಕಾರಿಗಳು ಕೊಡುವುದು ಕೇವಲ ರಿಪೋರ್ಟ್ ಅಷ್ಟೇ. ಆದರೆ ನಮಗೆ ಬೇಕಾಗಿರುವುದು ಸರ್ಟಿಫಿಕೆಟ್. ಕೆಆರ್ಎಸ್ನಲ್ಲಿ ಬಿರುಕು ಬಿಟ್ಟಿಲ್ಲ ಎನ್ನುವುದಾದರೆ ಸಂತಸವೇ ಆಗುತ್ತದೆ. ಆ ಬಗ್ಗೆ ಮೊದಲು ಸಂತಸಪಡುವುದು ನಾನೇ ಎಂದು ಸುಮಲತಾ ಹೇಳಿಕೊಂಡಿದ್ದಾರೆ.
ಕೆಆರ್ ಎಸ್ ಜಲಾಶಯ ಬಿರುಕು ಬಿಟ್ಟಿಲ್ಲ ಎಂದು ಪ್ರಮಾಣಪತ್ರ ಸಿಕ್ಕಿದರೆ ಸಂತೋಷಪಡುವವಳು ನಾನು, ಅಲ್ಲಿನ ಜನರ ಜೀವನಕ್ಕೆ ಸುರಕ್ಷತೆ ಬೇಕಾಗಿದೆ. ಜಲಾಶಯದ ಭದ್ರತೆ ವಿಚಾರದಲ್ಲಿ ರಾಜಕೀಯವಾಗಿ ಏನೇ ಬಂದರೂ ನಾನು ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಜೆಡಿಎಸ್ ನಾಯಕರು ತಮ್ಮ ಅಪ್ರಬುದ್ಧ ಹೇಳಿಕೆಗಳನ್ನು ಮುಂದುವರಿಸುತ್ತಿದ್ದರೆ ಅವರ ನಿಜಸ್ವರೂಪ ಜನರಿಗೆ ಗೊತ್ತಾಗುತ್ತದೆ, ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಬೇಕಾಗುತ್ತದೆ. ಸಂಸದೆಯಾಗಿ ನನ್ನ ಜವಾಬ್ದಾರಿ ನನಗೆ ಗೊತ್ತಿದೆ ಎಂದು ಇಂದು ಸಹ ಜೆಡಿಎಸ್ ದಳಪತಿಗಳ ಮೇಲೆ ಸುಮಲತಾ ಅಂಬರೀಷ್ ಹರಿಹಾಯ್ದಿದ್ದಾರೆ.